ವಿಪರೀತ ಮದ್ಯ ಸೇವಿಸಿ ಯುವತಿ ಅಸ್ವಸ್ಥ: ತುರ್ತು ನೆರವಿಗೆ ಧಾವಿಸಿದ ಮಂಜುನಾಥ ನಾಯ್ಕ ಹಾಗೂ ಸ್ಥಳೀಯರು
ಅಂಕೋಲಾ: ಎಲ್ಲಿಂದಲೋ ವಿಪರೀತ ಮದ್ಯಪಾನ ಸೇವಿಸಿಕೊಂಡು ಬಂದು ಅಂಕೋಲಾ ಬಸ್ ನಿಲ್ದಾಣದ ಎದುರುಗಡೆಯ ಖಾಸಗಿ ಕಟ್ಟಡವೊಂದರಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಹೊರಜಿಲ್ಲೆಯ ಯುವತಿಯೊಬ್ಬಳನ್ನು ತಕ್ಷಣವೇ ತಾಲೂಕು ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ರವಾನಿಸಿದ ಘಟನೆ ದಿನಾಂಕ 06-09-2026ರ ಮಧ್ಯಾಹ್ನ ನಡೆದಿದೆ..

ಖಾಸಗಿ ಕಟ್ಟಡದಲ್ಲಿ ಮದ್ಯದ ಅಮಲಿನಲ್ಲಿದ್ದ ಯುವತಿಯು ಪ್ರಜ್ಞೆ ತಪ್ಪಿ, ಮೂತ್ರ ವಿಸರ್ಜನೆ ಮಾಡಿಕೊಂಡು ಅತ್ಯಂತ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡ ಕಟ್ಟಡದ ಮಾಲೀಕ ಹಾಗೂ ಸಮಾಜ ಸೇವಕ ಮಂಜುನಾಥ ನಾಯ್ಕ ಅವರು ತಕ್ಷಣವೇ ಅಂಕೋಲಾ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಬೆಳಂಬಾರದ ಮಹದೇವ ಗೌಡ ಸೇರಿದಂತೆ ಇತರ ಸ್ಥಳೀಯರ ನೆರವಿನಿಂದ ಯುವತಿಯನ್ನು ಆರೋಗ್ಯ ಇಲಾಖೆಯ ಆಂಬುಲೆನ್ಸ್ ಮೂಲಕ ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು.ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಸದರಿ ಯುವತಿ ಹೊರಜಿಲ್ಲೆಯ ಆಧಾರ್ ಕಾರ್ಡ್ ಹೊಂದಿದ್ದು, ಕಳೆದ ಕೆಲವು ದಿನಗಳ ಹಿಂದೆ ಮಂಜಗುಣಿ ವ್ಯಾಪ್ತಿಯಲ್ಲಿಯೂ ಮದ್ಯದ ಅಮಲಿನಲ್ಲಿ ತಿರುಗಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆಕೆಯ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು, ಯುವತಿಯ ಪೋಷಕರನ್ನು ಪತ್ತೆ ಹಚ್ಚಿ ಆಕೆಯನ್ನು ಸುರಕ್ಷಿತವಾಗಿ ಪಾಲಕರಿಗೆ ತಲುಪಿಸಬೇಕಾಗಿದೆ.
✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್ ಅಂಕೋಲಾ.













Leave a Reply