ಹೆತ್ತವರ ಬೈಗುಳಕ್ಕೆ ಮನನೊಂದು ಮನೆ ಬಿಟ್ಟಿದ್ದ ಹತ್ತನೇ ತರಗತಿಯ ಬಾಲಕಿ:
ಕುಮಟಾ: ಮನೆಯಲ್ಲಿ ಹೆತ್ತವರು ಹೊಡೆದು ಬೈದರೆಂಬ ಸಣ್ಣ ಕಾರಣಕ್ಕೆ ಮನನೊಂದು, ಯಾವುದೇ ದಿಕ್ಕು-ದೆಸೆ ಇಲ್ಲದೆ ತುತ್ತತುದಿಯ ನಿರ್ಧಾರ ಕೈಗೊಂಡು ಮನೆ ಬಿಟ್ಟಿದ್ದ ಅಪ್ರಾಪ್ತ ಶಾಲಾ ಬಾಲಕಿಯೊಬ್ಬಳನ್ನು ಅಧಿಕಾರಿಯೊಬ್ಬರ ಸಮಯಪ್ರಜ್ಞೆ ಮತ್ತು ಮಾನವೀಯ ನಡೆ ಸುರಕ್ಷಿತವಾಗಿ ಪೋಷಕರ ಕೈಸೇರಿಸುವಂತೆ ಮಾಡಿದೆ. ಈ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡದೊಂದು ಅನಾಹುತ ಹಾಗೂ ಬಾಲಕಿ ದಾರಿ ತಪ್ಪುವುದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಭಟ್ಕಳದ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಗೆ ಶನಿವಾರ ಮನೆಯಲ್ಲಿ ಪೋಷಕರು ಯಾವುದೋ ವಿಷಯಕ್ಕೆ ಹೊಡೆದು, ಬೈದಿದ್ದಾರೆನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಬಾಲಕಿ, ಮುಂದೇನು ಮಾಡಬೇಕು ಎಂಬ ಅರಿವಿಲ್ಲದೆ ಶನಿವಾರ (ಜೂನ್ 6) ಸಂಜೆ ಸುಮಾರು 4:00 ಗಂಟೆಯ ಸುಮಾರಿಗೆ ಭಟ್ಕಳದಿಂದ ಹುಬ್ಬಳ್ಳಿಗೆ ಹೊರಟಿದ್ದ KSRTC ಬಸ್ಸನ್ನು ಹತ್ತಿದ್ದಾಳೆ.ಇದೇ ಬಸ್ಸಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ (PDO) ಗಿರೀಶ್ ನಾಯಕ್ ಅವರೂ ಸಹ ಪ್ರಯಾಣಿಸುತ್ತಿದ್ದರು. ಮೂಲತಃ ಅಂಕೋಲಾದವರಾದ ಗಿರೀಶ್ ನಾಯಕ್ ಅವರು ಕರ್ತವ್ಯ ನಿಷ್ಠೆಗೆ ಹೆಸರಾದ ದಕ್ಷ ಅಧಿಕಾರಿ ಮಾತ್ರವಲ್ಲದೆ, ಅಪ್ಪಟ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡವರಾಗಿದ್ದಾರೆ. ಬಸ್ಸಿನಲ್ಲಿ ಒಂಟಿಯಾಗಿ ಕುಳಿತು ತೀವ್ರ ಆತಂಕ ಹಾಗೂ ಗೊಂದಲದಿಂದ ವರ್ತಿಸುತ್ತಿದ್ದ ಶಾಲಾ ಬಾಲಕಿಯ ನಡವಳಿಕೆಯನ್ನು ಗಿರೀಶ್ ನಾಯಕ್ ಅವರು ಸೂಕ್ಷ್ಮವಾಗಿ ಗಮನಿಸಿದರು. ಬಾಲಕಿಯ ಮುಖದಲ್ಲಿದ್ದ ಭಯ ಮತ್ತು ಅಸಹಾಯಕತೆಯನ್ನು ಕಂಡು ಅನುಮಾನಗೊಂಡ ಅವರು, ತಕ್ಷಣವೇ ಆಕೆಯ ಬಳಿ ತೆರಳಿ ಅತ್ಯಂತ ಆಪ್ತವಾಗಿ, ಪ್ರೀತಿಯಿಂದ ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಮಾಹಿತಿ ನೀಡಲು ಹಿಂಜರಿದ ಬಾಲಕಿ, ನಂತರ ಅಧಿಕಾರಿಯ ಸಮಾಧಾನದ ನುಡಿಗಳಿಗೆ ಕರಗಿ, ತಾನು ಮನೆಯಲ್ಲಿ ಜಗಳ ಮಾಡಿಕೊಂಡು ಹುಬ್ಬಳ್ಳಿಗೆ ಹೋಗುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾಳೆ.ಪರಿಸ್ಥಿತಿಯ ಗಂಭೀರತೆಯನ್ನು ಹಾಗೂ ಆಕೆಗೆ ಹುಬ್ಬಳ್ಳಿಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಪಿಡಿಒ ಗಿರೀಶ್ ನಾಯಕ್ ಅವರು ಕ್ಷಣವೂ ತಡಮಾಡದೆ ಕಾರ್ಯಪ್ರವೃತ್ತರಾದರು.

ಬಸ್ಸು ಕುಮಟಾ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಬಾಲಕಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿಕೊಂಡರು. ತಕ್ಷಣವೇ ಈ ಕುರಿತು ಭಟ್ಕಳ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಬಾಲಕಿಯಿಂದ ಪಡೆದ ಆಕೆಯ ಪೋಷಕರ ವಿಳಾಸ ಮತ್ತು ವಿವರಗಳನ್ನು ರವಾನಿಸಿದರು. ಬಳಿಕ ಬಾಲಕಿಯನ್ನು ಕುಮಟಾ ಪೊಲೀಸ್ ಠಾಣೆಗೆ ಕರೆದೊಯ್ದು ಪೊಲೀಸರ ವಶಕ್ಕೆ ಒಪ್ಪಿಸಿದರು. ವಿಷಯ ತಿಳಿದ ಭಟ್ಕಳ ಮತ್ತು ಕುಮಟಾ ಪೊಲೀಸರು ತಕ್ಷಣವೇ ಬಾಲಕಿಯ ಪೋಷಕರನ್ನು ಸಂಪರ್ಕಿಸಿ ಠಾಣೆಗೆ ಕರೆಸಿಕೊಂಡರು. ಪೊಲೀಸರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕಿಗೆ ಸೂಕ್ತ ಕೌನ್ಸೆಲಿಂಗ್ ನಡೆಸಿ, ಹೆತ್ತವರಿಗೂ ತಿಳಿಹೇಳಿ ಬಾಲಕಿಯನ್ನು ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.ವಿಶೇಷವೆಂದರೆ, ಅಂದು ಅಪರಿಚಿತ ಶಾಲಾ ವಿದ್ಯಾರ್ಥಿನಿಯ ರಕ್ಷಣೆಗಾಗಿ ನಿಂತ ಅಧಿಕಾರಿ ಗಿರೀಶ್ ನಾಯಕ್ ಅವರು, ಇಡೀ ಪ್ರಕ್ರಿಯೆ ಮುಗಿದು ಬಾಲಕಿ ಸುರಕ್ಷಿತವಾಗಿ ಪೋಷಕರ ವಶವಾಗುವವರೆಗೂ ಜೊತೆಯಲ್ಲೇ ಇದ್ದರು. ಆ ಬಾಲಕಿಗಾಗಿ ತಮ್ಮ ಸ್ವಂತ ಸಮಯವನ್ನು ಮುಡುಪಾಗಿಟ್ಟು, ಅಂದು ರಾತ್ರಿ 11:00 ಗಂಟೆಗೆ ಅವರು ತಮ್ಮ ಮನೆ ತಲುಪಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಮಕ್ಕಳು ಮನೆ ಬಿಟ್ಟು ದಾರಿ ತಪ್ಪುವ ಅಥವಾ ಬೇರೆ ಯಾವುದೋ ಅನಾಹುತಕ್ಕೆ ಒಳಗಾಗುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ, ಹೆತ್ತ ಕರುಳಿನಂತೆ ಯೋಚಿಸಿ ಬಾಲಕಿಯ ಜೀವ ರಕ್ಷಿಸಿದ ಗಿರೀಶ್ ನಾಯಕ್ ಅವರಂತಹ ದಕ್ಷ ಮತ್ತು ಮಾನವೀಯತೆ ಉಳ್ಳ ಅಧಿಕಾರಿಗಳು ಸಮಾಜದಲ್ಲಿ ಅಪರೂಪ. ಅವರ ಈ ಸಮಯಪ್ರಜ್ಞೆ ಹಾಗೂ ತಕ್ಷಣವೇ ಸ್ಪಂದಿಸಿದ ಪೊಲೀಸ್ ಇಲಾಖೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ಹಾಗೂ ಗೌರವ ವ್ಯಕ್ತವಾಗಿದೆ.













Leave a Reply