ಕಾರವಾರ* :ಮಾಹಿತಿ ಹಕ್ಕು ಕಾಯಿದೆ (RTI) ಎಂಬುದು ಪ್ರಜೆಗಳ ಕೈಯಲ್ಲಿರುವ ಪಾರದರ್ಶಕತೆಯ ಕನ್ನಡಿ. ಆದರೆ ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯಲ್ಲಿ ಈ ಕಾಯಿದೆಯನ್ನು ಅಧಿಕಾರಿಗಳು ಹೇಗೆ ದಾರಿತಪ್ಪಿಸಿ ‘ಕೊಲೆ’ ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಸ್ಪಷ್ಟ ಸಾಕ್ಷಿ ಇಲ್ಲಿದೆ ನೋಡಿ ಬನ್ನಿ.
ಪ್ರಕರಣ ಏನಾಗಿತ್ತು?ಅಂಕೋಲಾ ತಾಲೂಕಿನ ಹೊನ್ನೇಬೈಲಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿದ್ದ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯು (ದಿನಾಂಕ: 18-05-2026) ಜಿಲ್ಲಾ ಪಂಚಾಯತಿಗೆ ಸ್ಪಷ್ಟ ನಿರ್ದೇಶನ ನೀಡಿತ್ತು.ಜಿಲ್ಲಾಧಿಕಾರಿಗಳ ಈ ಪತ್ರದ ಆಧಾರದ ಮೇಲೆ ಜಿ.ಪಂ. ಅಧಿಕಾರಿಗಳು ಇಲ್ಲಿಯವರೆಗೆ ಕೈಗೊಂಡ ಕ್ರಮಗಳೇನು, ಕಡತದಲ್ಲಿ ಚಲಿಸಿರುವ ಟಿಪ್ಪಣಿ ಹಾಳೆಗಳು (Note Sheets) ಹಾಗೂ ನೀಡಲಾದ ನೋಟೀಸ್ಗಳ ಪ್ರತಿಗಳ ಬಗ್ಗೆ ಅರ್ಜಿದಾರರು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು.
ನಂತರ ಏನಾಯ್ತು?* ಅರ್ಜಿದಾರರು ಕೋರಿದ ಸರಕಾರಿ ದಾಖಲೆಗಳನ್ನು ನೀಡಬೇಕಿದ್ದ ಸಾರ್ವಜನಿಕ ಮಾಹಿತಿ ಅಧಿಕಾರಿಯು ಸಂಪೂರ್ಣ ಕಾನೂನುಬಾಹಿರ ಹಾಗೂ ಅಸಂಬದ್ಧ ನೆಪವೊಂದನ್ನು ಮುಂದಿಟ್ಟರು. *”ನೀವು ಕೇಳಿರುವುದು ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ, ಹೀಗಾಗಿ ಇದು ಕಲಂ 2(f) ನಡಿ ಮಾಹಿತಿ ಎನಿಸಿಕೊಳ್ಳುವುದಿಲ್ಲ* ” ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿದರು!ಜಿಲ್ಲಾಧಿಕಾರಿಗಳು ಆದೇಶ ನೀಡಿ ತಿಂಗಳುಗಳೇ ಕಳೆದಿದ್ದರೂ, ಆ ಕಡತದ ಮೇಲೆ ಜಿ.ಪಂ.ನಲ್ಲಿ ಏನು ಕ್ರಮ ನಡೆದಿದೆ ಎಂಬ ಸರಕಾರಿ ದಾಖಲೆಯನ್ನು ಕೇಳಿದರೆ, ಅದನ್ನು “ಮುಂದೆ ನಡೆಯುವ ಘಟನೆ” ಎಂದು ಕಾಗದದ ಮೇಲೆಯೇ ಸುಳ್ಳು ಬರೆದು ಅರ್ಜಿಯನ್ನು ಎಸೆದಿರುವುದು ಮಾಹಿತಿ ಹಕ್ಕಿಗೆ ಎಸಗಿದ ನೇರ ಅಪಚಾರ.
ಅಧಿಕಾರಿಗಳಿಗೆ ಕಾಯಿದೆಯ ತರಬೇತಿ ನೀಡುವುದು ಅತ್ಯಗತ್ಯ!: ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 17103/2009 ರಲ್ಲಿ ಸ್ಪಷ್ಟ ತೀರ್ಪು ನೀಡಿದ್ದು, “ದೂರು ಅಥವಾ ಅರ್ಜಿಯ ಮೇಲೆ ಸರಕಾರಿ ಕಚೇರಿಯಲ್ಲಿ ಕೈಗೊಂಡ ಕ್ರಮದ ಮಾಹಿತಿಯನ್ನು RTI ಅಡಿಯಲ್ಲಿ ಕೋರಿದಾಗ ಕಡ್ಡಾಯವಾಗಿ ನೀಡಬೇಕು” ಎಂದು ಆದೇಶಿಸಿದೆ. ಇದನ್ನೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಸಹ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಮೂಲಕ ಸ್ಪಷ್ಟಪಡಿಸಿದೆ.ಹೈಕೋರ್ಟ್ ಆದೇಶ ಹಾಗೂ DPAR ಸುತ್ತೋಲೆಯ ಕನಿಷ್ಠ ಜ್ಞಾನವೂ ಇಲ್ಲದೆ, “ವಿಲೇವಾರಿ” ಹೆಸರಿನಲ್ಲಿ ಮಾಹಿತಿ ನಿರಾಕರಿಸುತ್ತಿರುವ ಜಿ.ಪಂ. ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯಿದೆ ಮತ್ತು ಹೈಕೋರ್ಟ್ ತೀರ್ಪುಗಳ ಬಗ್ಗೆ ಕೂಡಲೇ ವಿಶೇಷ ತರಬೇತಿ ನೀಡಬೇಕಿದೆ.
ನಿಯಮಗಳ ಅರಿವಿಲ್ಲದೆ ಅಥವಾ ಬೇಕೆಂದೇ ಕಡತ ಬಚ್ಚಿಡಲು ಹೊರಟಿರುವ ಇಂತಹ ಅಧಿಕಾರಿಗಳ ಧೋರಣೆಯಿಂದಾಗಿ ಜಿ.ಪಂ.ನಲ್ಲಿ ಪಾರದರ್ಶಕತೆ ಸಂಪೂರ್ಣವಾಗಿ ಹತ್ಯೆಯಾಗುತ್ತಿದೆ. ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಜಿ.ಪಂ. ಸಿಇಒ (CEO) ಅವರಾದರೂ ಈ ಅಧಿಕಾರಿಗಳಿಗೆ ಸರಿಯಾದ ಕಾನೂನು ತರಬೇತಿಯ ಅಗತ್ಯವನ್ನು ನೆನಪಿಸಿ, ಅರ್ಜಿದಾರರಿಗೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.













Leave a Reply