ಭೂಮಾಪನ ಇಲಾಖೆ ಸಂಕಷ್ಟದಲ್ಲಿ – ಪರವಾನಿಗೆ ಭೂಮಾಪಕರ ಹೋರಾಟ ತೀವ್ರ4.87 ಲಕ್ಷ ಅರ್ಜಿಗಳು ಪೆಂಡಿಂಗ್, ತುರ್ತು ನಕ್ಷೆ-ಹದ್ದುಬಸ್ತು ಕೆಲಸಗಳು ಸ್ಥಗಿತದಿಂದ ಜನತೆ ಪರದಾಟ.​

ಭೂಮಾಪನ ವ್ಯವಸ್ಥೆ ಕುಸಿತದ ಅಂಚಿನಲ್ಲಿ – 6,000 ಕುಟುಂಬಗಳ ಹೋರಾಟಸರ್ಕಾರದ ತಕ್ಷಣದ ಮಧ್ಯಪ್ರವೇಶಕ್ಕೆ ಒತ್ತಾಯ ಹೆಚ್ಚಳ

ಕಾರವಾರ: ಕರ್ನಾಟಕದ ಭೂಮಾಪನ ಇಲಾಖೆಯಲ್ಲಿ ಕಳೆದ ಒಂದು ತಿಂಗಳಿನಿಂದ ಪರವಾನಿಗೆ ಭೂಮಾಪಕರು ಸರ್ವೆ ಕಾರ್ಯಕ್ಕೆ ಹೋಗದೆ ಇರುವ ಕಾರಣ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ.

ಕಳೆದ ಫೆಬ್ರವರಿ 2026 ರಿಂದ ರಾಜ್ಯದಾದ್ಯಂತ ಸುಮಾರು 6,000 ಪರವಾನಗಿ ಭೂಮಾಪಕರು (Licensed Surveyors) ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಇದರ ಪರಿಣಾಮವಾಗಿ ಇಡೀ ಇಲಾಖೆಯ ಕೆಲಸಗಳು ಕುಂಠಿತಗೊಂಡಿವೆ. ಈ ಮುಷ್ಕರದ ನೇರ ಪರಿಣಾಮವಾಗಿ ರಾಜ್ಯಾದ್ಯಂತ ಸಾರ್ವಜನಿಕರು ಸಲ್ಲಿಸಿರುವ ನಿಖರವಾಗಿ 4,87,272 ಭೂಮಾಪನ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿವೆ.​

ದಶಕಗಳಿಂದ ಇಲಾಖೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿರುವ ಈ ಭೂಮಾಪಕರು ಇಂದು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸಿಇಟಿ ಪರೀಕ್ಷೆ ಬರೆದು, ಕಠಿಣ ತರಬೇತಿ ಮುಗಿಸಿ ಸೇವೆಗೆ ಬಂದರೂ ಇವರಿಗೆ ಕನಿಷ್ಠ ಸೇವಾ ಭದ್ರತೆಯಾಗಲಿ ಅಥವಾ ಮಾಸಿಕ ಸಂಬಳವಾಗಲಿ ಇಲ್ಲದಿರುವುದು ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸಿದೆ. 2002 ರಿಂದ 2024 ರವರೆಗಿನ ವಿವಿಧ ಬ್ಯಾಚ್‌ಗಳ ಭೂಮಾಪಕರು ಇಂದು ಒಂದೇ ವೇದಿಕೆಯಡಿಯಲ್ಲಿ ನಿಂತು, “ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೌಲಭ್ಯ” ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರಕ್ಕೆ ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುವ ಈ ಶ್ರಮಿಕರಿಗೆ ಕನಿಷ್ಠ ಕುಳಿತುಕೊಳ್ಳಲು ಕುರ್ಚಿಯಿಲ್ಲ, ಆರೋಗ್ಯ ವಿಮೆಯಿಲ್ಲ, ಭವಿಷ್ಯ ನಿಧಿಯಿಲ್ಲದೆ ಬದುಕು ಅತಂತ್ರವಾಗಿದೆ.​

*ಆರ್.ವಿ. ದೇಶಪಾಂಡೆಯವರಿಗೆ ಮನವಿ ಸಲ್ಲಿಕೆ:* ಈ ಬಿಕ್ಕಟ್ಟಿನ ನಡುವೆಯೇ ಹೋರಾಟಕ್ಕೆ ಹೊಸ ಬಲ ಬಂದಿದ್ದು, ಉತ್ತರ ಕನ್ನಡ ಜಿಲ್ಲಾ ಪರವಾನಗಿ ಭೂಮಾಪಕರ ಸಂಘದ ಅಧ್ಯಕ್ಷರಾದ ಸೂರಜ್ ತಲಗೇರಿ ಅವರು ಹಿರಿಯ ನಾಯಕರು ಹಾಗೂ ಆಡಳಿತ ಸುಧಾರಣಾ ಆಯೋಗದ (ARC) ಅಧ್ಯಕ್ಷರಾದ ಮಾನ್ಯ ಆರ್.ವಿ. ದೇಶಪಾಂಡೆ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಲೈಸನ್ಸ್ ಸರ್ವೇಯರ್‌ಗಳ ಖಾಯಂ ನೇಮಕಾತಿ, ಸೇವಾ ಭದ್ರತೆ, ಸಮಾನ ವೇತನ ಮತ್ತು ಪಿ.ಎಫ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಗತ್ಯತೆ ಕುರಿತು ವಿವರವಾಗಿ ಚರ್ಚಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ದೇಶಪಾಂಡೆಯವರು, ಈ ಕುರಿತು ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

​ಫೆಬ್ರವರಿ ಯಿಂದ ಈಚೆಗೆ ಒಂದು ಕಡತವೂ ವಿಲೇವಾರಿಯಾಗದ ಕಾರಣ, ಜಮೀನು ಖರೀದಿ-ಮಾರಾಟ ಮಾಡುವವರು ಮತ್ತು ಬ್ಯಾಂಕ್ ಸಾಲಕ್ಕಾಗಿ ನಕ್ಷೆ ನಿರೀಕ್ಷಿಸುತ್ತಿರುವ ಲಕ್ಷಾಂತರ ರೈತರು ಕಚೇರಿಗಳಿಗೆ ಅಲೆಯುವಂತಾಗಿದೆ. ಹದ್ದುಬಸ್ತು, ತತ್ಕಾಲ್ ಪೋಡಿ, 11E ನಕ್ಷೆಯಂತಹ ತುರ್ತು ಕೆಲಸಗಳು ಸ್ಥಗಿತಗೊಂಡಿರುವುದು ರಾಜ್ಯದ ಕೃಷಿ ಮತ್ತು ರಿಯಲ್ ಎಸ್ಟೇಟ್ ವಲಯದ ಮೇಲೆ ದೊಡ್ಡ ಹೊಡೆತ ನೀಡಿದೆ.

ಸುಮಾರು 4.87 ಲಕ್ಷಕ್ಕೂ ಅಧಿಕ ಅರ್ಜಿಗಳು ಬಾಕಿ ಇರುವುದು ಕೇವಲ ಅಂಕಿ-ಅಂಶವಲ್ಲ, ಇದು ಲಕ್ಷಾಂತರ ಕುಟುಂಬಗಳ ಆಸ್ತಿ ಹಕ್ಕುಗಳ ವಿಳಂಬದ ಕಥೆಯಾಗಿದೆ.​ಈಗಾಗಲೇ ವಯೋಮಿತಿ ಮೀರುತ್ತಿರುವ ಭೂಮಾಪಕರಿಗೆ ಸೇವಾ ಭದ್ರತೆ ನೀಡುವುದು ಮತ್ತು ಮೃತರಾದ ಕುಟುಂಬಗಳಿಗೆ ನೆರವು ನೀಡುವಂತಹ ಮಾನವೀಯ ಬೇಡಿಕೆಗಳನ್ನು ಸರ್ಕಾರ ಈ ಕೂಡಲೇ ಈಡೇರಿಸಬೇಕಿದೆ. ಹಳೆಯ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ, ಈ “ಆಧುನಿಕ ಜೀತ ಪದ್ಧತಿ”ಗೆ ಮುಕ್ತಿ ನೀಡಬೇಕೆಂಬುದು ಇಡೀ ರಾಜ್ಯದ ಒತ್ತಾಸೆಯಾಗಿದೆ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಈ 6,000 ಕುಟುಂಬಗಳ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಗ್ರಾಮೀಣ ಕರ್ನಾಟಕದಲ್ಲಿ ಭೂ ದಾಖಲೆಗಳ ವ್ಯವಸ್ಥೆ ಸಂಪೂರ್ಣ ಕುಸಿದು ಬೀಳುವ ಅಪಾಯವಿದೆ.

ವರದಿ :ಕಿರಣ ಗಾಂವಕರ. ಅಂಕೋಲಾ ✍️

Leave a Reply

Your email address will not be published. Required fields are marked *

error: Content is protected !!