ಅಂಕೋಲಾ: ನಗರದ ಹೃದಯಭಾಗದ ಅಂಕೋಲಾ ಬಸ್ ನಿಲ್ದಾಣ ಎದುರುಗಡೆ ಹೋಟೆಲ್ ಪಾರಿಜಾತ ಮುಂದುಗಡೆ 15 ದಿನಗಳಿಂದ ಕಸದ ‘ಅದ್ದೂರಿ ಪ್ರದರ್ಶನ’ ನಡೆಯುತ್ತಿದ್ದರೂ, ಪುರಸಭೆ ಮಾತ್ರ ಮೌನಕ್ಕೆ ಶರಣಾಗಿದೆ. ಈ ಅವ್ಯವಸ್ಥೆಯ ವಿರುದ್ಧ ಜಾಗೃತ ನಾಗರಿಕ ಶ್ರೀಧರ್ ನಾಯ್ಕ ( ಪ್ರಿಯಾ ಕಂಪ್ಯೂಟರ್) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪುರಸಭೆಯ ಈ ಬೇಜವಾಬ್ದಾರಿ ಮೌನವನ್ನು ‘ಕ್ರಾಂತಿಕಾರಿ ನ್ಯೂಸ್’ ಮೂಲಕ ಪ್ರಶ್ನಿಸಿದ್ದಾರೆ.
ಇದು ಕೇವಲ ಕಸದ ರಾಶಿಯಲ್ಲ, ಆಡಳಿತದ ವೈಫಲ್ಯ ಮತ್ತು ನಾಗರಿಕ ಪ್ರಜ್ಞೆಯ ಅಧಃಪತನದ ಸಂಕೇತ. ರಸ್ತೆಯ ಬದಿಯಲ್ಲಿ ಮನಬಂದಂತೆ ಕಸ ಎಸೆಯುವವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲದಂತಾಗಿರುವುದು ದುರದೃಷ್ಟಕರ. ಇಂದೇನಾದರೂ ಈ ಕಸ ಸುರಿಯುವ ಸಂಸ್ಕೃತಿಗೆ ಬ್ರೇಕ್ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ಇಡೀ ಮಾರ್ಕೆಟ್ ಪ್ರದೇಶವೇ ಕಸದ ತೊಟ್ಟಿಯಾಗುವುದರಲ್ಲಿ ಸಂಶಯವಿಲ್ಲ.ಸಾರ್ವಜನಿಕರು ಈ ದುರ್ನಾತ ಮತ್ತು ಅಸಹ್ಯದ ನಡುವೆಯೇ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಪುರಸಭೆಯ ಅಧಿಕಾರಿಗಳಿಗೆ ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವಾಗ ಈ ಗಲೀಜು ಕಾಣಿಸುತ್ತಿಲ್ಲವೇ? ಅಥವಾ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ? ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.ಒಂದು ಸುಂದರ ಪಟ್ಟಣದ ಅಂದಗೆಡಿಸುತ್ತಿರುವ ಈ ಕಸದ ರಾಶಿಯನ್ನು ಪುರಸಭೆ ಕೂಡಲೇ ತೆರವುಗೊಳಿಸಬೇಕು ಮತ್ತು ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ, ಈ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಬೀದಿಗಿಳಿಯುವ ಎಚ್ಚರಿಕೆಯನ್ನು ನೀಡಿದ್ದಾರೆ.













Leave a Reply